ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿ : ವಿಮಾ ಪರಿಹಾರ ಪಡೆಯಲು ಅವಕಾಶ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಇಎನ್ಎಲ್ ಧಾರವಾಡ:
ನವೆಂಬರ್ ತಿಂಗಳಿನಲ್ಲಿಯೂ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ , ಮನೆ ಹಾನಿಯಾದ ಪಕರಣಗಳ ವಿವರಗಳನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ (RGRHCL) ತಂತ್ರಾಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಅವಧಿಯನ್ನು ಸರ್ಕಾರ ಡಿ. 7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ . ಈ ಕಾಲಮಿತಿಯೊಳಗೆ ಮನೆ ಹಾನಿಯಾದ ಪ್ರಕರಣಗಳ ವಿವರಗಳನ್ನು ತಂತ್ರಾಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಿಯಮಾನುಸಾರ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲಿಸಬೇಕು ಎಂದು ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮನೆ ಹಾನಿಗೊಳಗಾದ ಪ್ರಕರಣಗಳನ್ನುಸಮೀಕ್ಷೆ ಮಾಡಿ ಎ,ಬಿ ಹಾಗೂ ಸಿ ಎಂದು ವರ್ಗೀಕರಿಸಿ ದಾಖಲಿಸುವ ಕಾರ್ಯ ಸಮರ್ಪಕವಾಗಿ ಜರುಗಬೇಕು.ಜಿಲ್ಲೆಯ ಜನತೆ ಈ ಕಾಲಾವಕಾಶದ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಪ್ರಸಕ್ತ 2021 ರ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು, ಸ್ಥಳೀಯ ಗಂಡಾಂತರಗಳಿಂದ ಹಾನಿಯಾದರೆ.ಬೆಳೆ ವಿಮೆ ಮಾಡಿಸಿರುವ ರೈತರು ಈ ಕುರಿತು ನೇರವಾಗಿ ಸಂಬಂಧಪಟ್ಟ ವಿಮಾ ಸಂಸ್ಥೆಗಳ ಕಚೇರಿಗಳಿಗೆ , ಹಣಕಾಸು ಸಂಸ್ಥೆ ( ಬ್ಯಾಂಕ್),ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಮೂಲಕ ತಕ್ಷಣ ಮಾಹಿತಿ ನೀಡಬೇಕು . ವಿಮೆ ಮಾಡಿಸಿದ ಬೆಳೆಯ ವಿವರಗಳು , ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ಮಾಹಿತಿ ನೀಡಬೇಕು.ಜಿಲ್ಲೆಯ ರೈತರು ನಿಗದಿತ ಕಾಲಾವಧಿಯೊಳಗೆ ಅಂದರೆ ಮಳೆಯಿಂದ ಹಾನಿಯಾದ 72 ಗಂಟೆಗಳೊಳಗೆ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.