ಇಎನ್ಎಲ್ ಧಾರವಾಡ: ಈ ಬಾರಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮವಾಗಿ ಬಂದಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ದಾಖಲಿಸಲು ಈಗಿನಿಂದಲೇ ಸ್ಪಷ್ಟ ಕ್ರಿಯಾ ಯೋಜನೆ ಹಾಕಿಕೊಳ್ಳಬೇಕು. ಎಸ್ಎಸ್ಎಲ್ಸಿ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾದ ಕೋರ್ಸುಗಳ ಆಯ್ಕೆ ಮಾಡಿ ಅಧ್ಯಯನ ಮಾಡುವ ಸ್ವಾತಂತ್ರ್ಯವನ್ನು ಪಾಲಕರು ಮಕ್ಕಳಿಗೆ ನೀಡಬೇಕು. ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ನಂತರ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಜಾಣ್ಮೆ, ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ 2021-22 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : ಸಿಎಂ ಬೊಮ್ಮಾಯಿ
ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಭವಿಷ್ಯ ರೂಪಿಸಲು ಪಾಲಕರು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಅಧ್ಯಯನದ ವಿಷಯ, ವೃತ್ತಿ ಆಯ್ದುಕೊಳ್ಳಲು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ. ಬರುವ ವರ್ಷ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ತರಲು ಸ್ಪಷ್ಟ ಕ್ರಿಯಾ ಯೋಜನೆ ತಯಾರಿಸಿಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಿನಿಂದಲೇ ಪ್ರಯತ್ನ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, ಇಂದಿನ ಮಕ್ಕಳ ಅಂಕಗಳಿಕೆಯ ಪ್ರಮಾಣ ನೋಡಿದರೆ ಇನ್ನು ಮುಂದೆ ಸ್ಪರ್ಧೆಯ ಗುಣಮಟ್ಟ ಹೆಚ್ಚಾಗುತ್ತದೆ. ಯಶಸ್ಸಿನ ಅಹಂ ತಲೆಗೆ ಏರಿಸಿಕೊಳ್ಳದೇ ಭವಿಷ್ಯ ರೂಪಿಸಿಕೊಳ್ಳಲು ಕಠಿಣ ಪರಿಶ್ರಮ ಮುಂದುವರೆಸಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ನಮ್ಮನ್ನು ನಾವು ಸಿದ್ಧಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ 29,569 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. 25,120 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರತಿಶತ 84.95 ರಷ್ಟು ಸಾಧನೆ ಮಾಡಲಾಗಿದೆ. ಓರ್ವ ವಿದ್ಯಾರ್ಥಿ 625, ಆರು ಜನ 624 ಹಾಗೂ ಏಳು ಜನ 623 ಅಂಕಗಳನ್ನು ಗಳಿಸಿ ರಾಜ್ಯದ ಮೊದಲ ಮೂರು ರ್ಯಾಂಕ್ ವಿಜೇತರ ಸಾಲಿನಲ್ಲಿ ಇದ್ದಾರೆ.
ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದವರಲ್ಲಿ ಒಬ್ಬರಾಗಿರುವ ಹುಬ್ಬಳ್ಳಿ ಚೇತನ್ ಪಬ್ಲಿಕ್ ಶಾಲೆ ವಿದ್ಯಾರ್ಥಿ ಶಿವಾನಂದ ಬಿ ಪಾಟೀಲ ಸನ್ಮಾನಿತರ ಪರವಾಗಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಗುರಿಯನ್ನು ತಲುಪಲು ಕಠಿಣ ಪರಿಶ್ರಮವೊಂದೇ ಮಾರ್ಗವಾಗಿದೆ ಎಂದರು.
ಪವನ್ ಆಂಗ್ಲ ಮಾಧ್ಯಮ ಶಾಲೆಯ ಅಭಿಷೇಕ್ ಅಡಕೆ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಪಾಠ ಬೋಧನೆಯೊಂದರಿಂದಲೇ ಈ ಸಾಧನೆ ಸಾಧ್ಯವಾಗಿದೆ. ಕಠಿಣ ಪರಿಶ್ರಮವಿದ್ದರೆ ಟ್ಯೂಷನ್ ಅಗತ್ಯವಿಲ್ಲ ಎಂದರು.
ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಧಾರವಾಡ ಕೆ.ಇ.ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ರಘೋತ್ತಮ ನಾಡಗೌಡರ, ಶಿರಗುಪ್ಪಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಚೇತನಾ ಮಣಕವಾಡ, ಹುಬ್ಬಳ್ಳಿ ಎಸ್ಜೆಎಸ್ ಶಾಲೆಯ ದಿವ್ಯಾ ಚವ್ಹಾಣ, ಮೂರನೇ ರ್ಯಾಂಕ್ ಪಡೆದ ಹುಬ್ಬಳ್ಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಕಲ್ಪ ಕುಂಠೆ, ಧಾರವಾಡ ಕೆ.ಇ.ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ಭಾಗ್ಯಶ್ರೀ ಭಾಗವತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ಹುಬ್ಬಳ್ಳಿಯ ನಿರ್ಮಲಾ ಟಕ್ಕರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಮಿμÁ ಕಿನ್ನಿ, ಧಾರವಾಡ ಕೆ.ಇ.ಬೋರ್ಡ್ ಶಾಲೆಯ ಸಿಂಚನಾ ದಾನಗೇರಿ, ಹುಬ್ಬಳ್ಳಿ ಡಾ.ಜಿ.ವಿ.ಜೋಶಿ ಆಂಗ್ಲ ಮಾಧ್ಯಮ ಶಾಲೆಯ ಮಧುಶ್ರೀ ಶಿವಳ್ಳಿ, ಬೆನಕ ವಿದ್ಯಾಮಂದಿರದ ಸುಚಿತ್ರಾ ಖಾನಣ್ಣವರ, ಕೇಶ್ವಾಪುರ ಕಾನ್ವೆಂಟ್ ಶಾಲೆಯ ಭಾವನಾ ಕಠಾರೆ, ಧಾರವಾಡ ಪ್ರಸೆಂಟೇಷನ್ ಬಾಲಕಿಯರ ಶಾಲೆಯ ಸಯೇದಾ ಶರೀಫಾ ಸಿಮ್ರನ್ ಮದನಿ, ಧಾರವಾಡ ಜೆಎಸ್ಎಸ್ ಶಾಲೆ ನಿಖಿತಾ ಪಿ.ಉಪ್ಪಾರ ಮತ್ತಿತರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ಎಸ್.ಎಸ್. ಕೆಳದಿಮಠ, ಉಪನಿರ್ದೇಶಕಿ(ಅಭಿವೃದ್ಧಿ) ಎನ್.ಕೆ.ಸಾವ್ಕಾರ್ ವೇದಿಕೆಯಲ್ಲಿ ಇದ್ದರು.
ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೂರ್ಣಿಮಾ ಮುಕ್ಕುಂದಿ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ವಂದಿಸಿದರು.
****************