34 C
Hubli
ಏಪ್ರಿಲ್ 25, 2024
eNews Land
ಜಿಲ್ಲೆ ಸುದ್ದಿ

ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಡಿ.ವಿ.ಮುತಾಲಿಕ ದೇಸಾಯಿ ಇನ್ನಿಲ್ಲ

ಇಎನ್ಎಲ್ ಧಾರವಾಡ: ಹಿರಿಯ ಪತ್ರಿಕೋದ್ಯಮಿ ಬೆಳಗಾವಿ ಜಿಲ್ಲೆಯ ಕೌಜಲಗಿ ಮೂಲದ ಹುಬ್ಬಳ್ಳಿ ಶ್ರೀನಗರ ನಿವಾಸಿಯಾಗಿದ್ದ  ಧ್ರುವರಾಜ ವೆಂಕಟರಾವ್ ಮುತಾಲಿಕ ದೇಸಾಯಿ (92) ಶನಿವಾರ ರಾತ್ರಿ ನಿಧನರಾದರು.

ಮಾಸ್ತರ, ನಾಟಕಕಾರ, ವಕೀಲ, ಸಾಮಾಜಿಕ ಕಾರ್ಯಕರ್ತ, ಸೇವಾದಳದ ಕಾರ್ಯಕರ್ತ ಅಲ್ಲದೇ ಪತ್ರಕರ್ತರಾಗಿ ಬಹುಮುಖಿಯಾಗಿ ಸಮಾಜದೆದುರು ತಮ್ಮನ್ನು ತೆರೆದುಕೊಂಡವರು ಮುತಾಲಿಕ ದೇಸಾಯಿ ಅವರು. ವರದಿಗಾರನಾಗಿಯೇ ಇದ್ದು ಈ ನಡುವೆ ಬೆಳಗಾವಿಯ ಶಾಲೆಯೊಂದರಲ್ಲಿ ಪಾಠ ಮಾಡಿದರು. ನೆಚ್ಚಿನ ವಿದ್ಯಾರ್ಥಿ ಗಳು ಇವರಿಗೆ ನೀಡಿದ ಬಿರುದು `ಗಾಳಿ ಮಾಸ್ತರ’ ಕಾರಣವೆಂದರೆ ಭೂಗೋಲದ ಆವರ್ತ, ಪತ್ಯಾವರ್ತ ಗಾಳಿಗಳ ಬಗ್ಗೆ ಮಾರ್ಮಿಕವಾಗಿ ಪಾಠ ಮಾಡಿದ್ದರಿಂದ ವಿದ್ಯಾರ್ಥಿಗಳಿಂದ ಇಂಥದೊಂದು ಅನ್ವರ್ಥ ಅವರಿಗೆ ದೊರಕಿತ್ತು.
ತಂದೆ ವೆಂಕಟರಾವ್ ಅವರು ವಕೀಲರು. ತಮ್ಮಂತೆ ಮಗನೂ ವಕೀಲನಾಗಬೇಕೆಂದು ಬಯಸಿದವರು. ಗಡಿ ಬೆಳಗಾವಿಯಲ್ಲಿ ವಕೀಲಿ ವೃತ್ತಿಯಲ್ಲಿ ಐದು ವರ್ಷ ಕೆಲಸ ಮಾಡಿದವರು. ನಾಡು ಏಕೀಕರಣದ ಕಾವು ತಾರಕಕ್ಕೇರಿದ್ದ ಸಂದರ್ಭ. ಆ ಹೊತ್ತಿನಲ್ಲಿಯೇ 1954 ರಲ್ಲಿ ಕನ್ನಡ ನಾಡಿನ ಕಳಕಳಿಯನ್ನಿಟ್ಟುಕೊಂಡಿದ್ದ ಇವರು ಅಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ಮೋಹರೆ ಹನುಮಂತರಾಯರ ಅಣತಿ ಮೇರೆಗೆ ಪತ್ರಿಕೆ ವರದಿಗಾರರಾಗಿ ಸಂ.ಕ ಕುಟುಂಬವನ್ನು ಸೇರಿದರು. ಇವರ ವರದಿಗಾರಿಕೆಯ ವೈಖರಿಯನ್ನು ಕಂಡಿದ್ದ ಮೊಹರೆ ಅವರು ಮುಂದಿನ ಎರಡೇ ವರ್ಷದಲ್ಲಿ ಹುಬ್ಬಳ್ಳಿಗೆ ಕರೆಸಿಕೊಂಡು ಸಂಪಾದಕಿ ಮಂಡಳಿಯಲ್ಲಿ ಉಪಸಂಪಾದಕ ಹುದ್ದೆ ನೀಡಿದರು. ಧ್ರುವರಾಜ ಅವರು ತಮ್ಮ ವಕೀಲಿ ವೃತ್ತಿಯ ಅನುಭವ ಮತ್ತು ಆಳ ಜೊತೆಗೆ ಸಮಾಜಮುಖಿಯಾದ ಚಿಂತನೆಗಳನ್ನು ಬರೆಹ ರೂಪದಲ್ಲಿ ಪರಣಾಮಕಾರಿಯಾದ ಅಗ್ರಲೇಖ, ಅಲ್ಲದೇ ವಿವಿಧ ವಿಷಯಗಳ ಕುರಿತಂತೆ ಬೆಳಕು ಚಲ್ಲುವ ವರದಿ ಲೇಖನಗಳನ್ನು ಬರೆಯುವ ಮೂಲಕ ಸಂಯುಕ್ತ ಕನರ್ಾಟಕದಲ್ಲೇ ಸ್ಥಾನಿಕ ಸಂಪಾದಕರಾಗಿ ಸೇವೆ ಸಲ್ಲಿಸಿದರು.

ಇಷ್ಟೇ ಅಲ್ಲದೇ ನಿಂತು ಹೋಗಿದ್ದ ಕರ್ಮವೀರ ಪತ್ರಿಕೆಯನ್ನು ಮತ್ತೆ ಪುನರಾರಂಭಿಸಲು ಕಾರಣಿಕರ್ತರು. ಅಷ್ಟೇ ಅಲ್ಲದೇ ಕರ್ಮವೀರ ಪತ್ರಿಕೆ ಕರ್ಣಧಾರತ್ವವನ್ನು ವಹಿಸಿಕೊಂಡು ಮುಂದೆವರಿಸಿದರು. ತಾವು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ವಆತಾ ಸಂಸ್ಥೆಗಳು ಎಂಬ ಹೊತ್ತಿಗೆಯನ್ನು 1968 ರಲ್ಲಿ ಪ್ರಕಟಿಸಿದರು.

ಸಂಯುಕ್ತ ಕರ್ನಾಟಕ ದಿಂದ ನಿವೃತ್ತಿಗೊಂಡ ನಂತರದಲ್ಲಿ ಉದಯವಾಣಿ, ಗೋವಾದ ದಿ. ನವಹಿಂದ ಟೈಮ್ಸ್ ಕೊಲ್ಹಾಪುರದ ಪುಢಾರಿ ಬೆಳಗಾವಿಯ ತರುಣ ಭಾರತ ಹೀಗೆ ಕನ್ನಡ, ಮರಾಠಿ, ಆಂಗ್ಲ ಪತ್ರಿಕೆಗಳನ್ನು ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ.
ಧಾರವಾಡ ಆಕಾಶವಾಣಿಯಲ್ಲಿ ಮುತಾಲಿಕದೇಸಾಯಿ ಅವರು `ಮನೆ ಮನೆಯಲ್ಲಿ’ ಮಾಲಿಕೆಯನ್ನು ಬರೆದರು. ಅದನ್ನು ಆಕಾಶವಾಣಿ ಬಿತ್ತರಗೊಳಿಸುತ್ತ ಬಂದಿತು. ಕಲಬುರಗಿ ಆಕಾಶವಾಣಿಯಲ್ಲಿ 1978-79ರಲ್ಲಿ ಬರೆದ ರೂಪಕ, ಲಘು ಹಾಸ್ಯ ಪ್ರಬಂಧಗಳೂ ಕೂಡ ಪ್ರಸಾರವಾಗಿವೆ. ಇಂದಿಗೂ ಇವರ ಹಾಸ್ಯ ಪ್ರವೃತ್ತಿ ಮೆಚ್ಚುವಂತದ್ದು. ಇಳಿವಯದಲ್ಲಿ ಕಣ್ಣು ಕಾಣದು, ಕಿವಿ ಕೇಳದು ಆದರೂ ಹಾಸ್ಯ ಪ್ರವೃತ್ತಿ ಮಾತ್ರ ಇನ್ನು ಹಚ್ಚಹಸಿರು.
`ದಿಲ್ಲಿ ದೊರೆಗೆ ದೂರು ನೀಡಿ ದಕ್ಕಿಸಿಕೊಂಡ..’ ಎಂಬ ವರದಿ ಗಮನ ಸೆಳೆಯಿತು. ಬೆಂಗಳೂರು ಪ್ರೆಸ್ ಕ್ಲಬ್ನಿಂದ ನೀಡುವ ಉತ್ತಮ ಗ್ರಾಮಾಂತರ ವರದಿ ಎಂದು ಪ್ರಶಸ್ತಿಗೆ ಭಾಜನವಾಯಿತು.
2000 ಇಸ್ವಿಯಲ್ಲಿ ಹು-ಧಾ ಮಹಾನಗರಪಾಲಿಕೆ ಕೊಡುವ ಧೀಮಂತ ಪ್ರಶಸ್ತಿ, ಬೆಳಗಾವಿಯ ಕಸಾಪ ನೀಡುವ ಸಿರಿಗನ್ನಡ ಪ್ರಶಸ್ತಿ(2003), ಕೊಡಗಿನ ಲೇಖಕರ ಸಂಘ, ಧಾರವಾಡದ ಲಯನ್ಸ್ ಹಾಗೂ ರೋಟರಿ ಕ್ಲಬ್ನಿಂದಲೂ ಗೌರವ ಇವರಿಗೆ ಸಂದಿವೆ. ಇವರ ಪತ್ರಿಕಾ ಸೇವೆ ಗುರುತಿಸಿ ಪತ್ರಕರ್ತರಾಗಿದ್ದ ಆರ್. ಎಚ್. ಕುಲಕರ್ಣಿ ಅವರ ಸ್ಮಾರಕ ಪ್ರಶಸ್ತಿ(2007) ಹೀಗೆ ಅನೇಕ ಮಾನಸನ್ಮಾನಗಳು ಲಭಿಸಿವೆ.
ಇತರ ಕ್ಷೇತ್ರ:
ಧ್ರುವರಾಜ ಮುತಾಲಿಕದೇಸಾಯಿ ಅವರು 1943 ರಿಂದ ರಾಷ್ಟ್ರ ಸೇವಾದಳದ ಕಾರ್ಯಕರ್ತರಾಗಿ 15 ವರ್ಷ ಸೇವೆ ಸಲ್ಲಿಸಿದರು. ಜೂಜು, ಹರಿಜನಿವಾರ ಮೊದಲಾದ ನಾಟಕಗಳಲ್ಲಿ ನಟಿಸಿದ್ದಾರೆ. ಬೆಳಗಾವಿ, ಧಾರವಾಡಗಳಲ್ಲಿಯೂ ಹವ್ಯಾಸಿ ನಾಟಕಗಳಲ್ಲಿ ಪಾತ್ರವಾಗಿದ್ದಾರೆ. ಇದಲ್ಲದೇ 22 ವರ್ಷ ಪುರಂದರ-ಕನಕದಾಸ ಉತ್ಸವವನ್ನು ನಡೆಸಿಕೊಂಡು ಬಂದವರಿವರು. ಭಜನೆ ಮತ್ತೊಂದು ಆಕರ್ಷಣೆ, ಅಲ್ಲದೇ ಭಜನೆ, ದಾಸರ ಕೀರ್ತನೆ ಇವರನ್ನು ಸೆಳೆದ ಕ್ಷೇತ್ರಗಳು. 2018ರಲ್ಲಿ ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅವರಿಗೆಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುವ ಅವರಿಗೆ ರಾಜ್ಯ ಸರ್ಕಾರ ಮೂರು ವರ್ಷದ ಹಿಂದೆ ಟಿಎಸ್ಆರ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೂ ಅದನ್ನು ಸ್ವೀಕರಿಸುವ ಭಾಗ್ಯ ದೊರೆಯಲೇ ಇಲ್ಲ. ಶನಿವಾರ ರಾತ್ರಿ ನಿಧನರಾದರು. ಇಬ್ಬರು ಪುತ್ರರು ಹಾಗೂ ಬಂಧು ಬಳಗ ಅಗಲಿದ್ದಾರೆ.

Related posts

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

eNEWS LAND Team

2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ ; ರೈತರೇ ಸ್ವತ: ಬೆಳೆ ಸಮೀಕ್ಷೆ ಮಾಡಬಹುದು

eNEWS LAND Team

ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ

eNEWS LAND Team