ಇಎನ್ಎಲ್ ಧಾರವಾಡ: ತಾಲೂಕಿನ ಅಮ್ಮಿನಭಾವಿ ಗ್ರಾಮದ ಗ್ರಾಮದೇವತೆಯರಾದ ಶ್ರೀದುರ್ಗಾ ಮಾತೆ ಮತ್ತು ಶ್ರೀದ್ಯಾಮವ್ವ ಮಾತೆಯರ ಜಾತ್ರಾಮಹೋತ್ಸವದ 5ನೇ ವಾರ್ಷಿಕೋತ್ಸವ ಜೂ.4 ರಂದು ಕಾರಹುಣ್ಣಿಮೆಯ ದಿನ ಜರುಗಲಿದೆ.
30 ವರ್ಷಕೊಮ್ಮೆ ಜರುಗುವ ಅಮ್ಮಿನಭಾವಿ ಗ್ರಾಮದೇವತೆಯರ ಜಾತ್ರೆ 2018 ರ ಕಾರಹುಣ್ಣಿಮೆಯಂದು ಜರುಗಿತ್ತು. ಆ ಸಂದರ್ಭದಲ್ಲಿ ಸುಂದರ ವಿನ್ಯಾಸದಲ್ಲಿ ಕಲ್ಲಿನಿಂದಲೇ ಹೊಸದಾಗಿ ಗ್ರಾಮದೇವತೆಯರ ದೇವಾಲಯ ನಿರ್ಮಾಣ ಮಾಡಿದ್ದರಿಂದ ಜಾತ್ರೆ ಜರುಗಿದ ನಂತರ 5 ನೇ ವರ್ಷದಲ್ಲಿ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಿದಂತೆ ಪ್ರಸ್ತುತ ಜೂ.4 ರಂದು ಕಾರಹುಣ್ಣಿಮೆಯ ದಿನವೇ ಈ ಧಾರ್ಮಿಕ ಸಮಾರಂಭ ಜರುಗುತ್ತಿದೆ. ಜೂ.4 ರಂದು ಪ್ರಾತ:ಕಾಲ ಉಭಯ ಗ್ರಾಮದೇವತೆಯರಿಗೆ ನೂತನಾಂಬರ ಮತ್ತು ಬೆಳ್ಳಿಯ ಕಿರೀಟ ಧಾರಣೆ, ಪುಷ್ಪಾಲಂಕಾರ ಮಹಾಪೂಜೆ ನಡೆಯುವುದು.
ಮೊದಲ ಉಡಿ ಅಮ್ಮಿನಭಾವಿ ಪಂಚಗೃಹ ಹಿರೇಮಠದ (ಶ್ರೀಶಾಂತೇಶ್ವರ ಮಠದ) ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪರಂಪರೆಯಂತೆ ತಮ್ಮ ಶ್ರೀಮಠದ ಪರವಾಗಿ ಮುಂಜಾನೆ 7-30 ಗಂಟೆಗೆ ಉಭಯ ಗ್ರಾಮದೇವತೆಯರಿಗೆ ಮೊದಲನೆಯ ಉಡಿ ತುಂಬುವರು.
ಪಲ್ಲಕ್ಕಿ ಉತ್ಸಮ ಹೊಸದಾಗಿ ಪಂಚಲೋಹದಲ್ಲಿ ಸಿದ್ಧಗೊಳಿಸಲಾಗಿರುವ ಶ್ರೀ ದುರ್ಗಾಮಾತೆ ಮತ್ತು ಶ್ರೀ ದ್ಯಾಮವ್ವಮಾತೆಯರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವ ಮುಂಜಾನೆ 8-30 ಗಂಟೆಗೆ ನಡೆಯುವುದು. ಡೊಳ್ಳು ಮತ್ತು ಕರಡಿಮಜಲಿನೊಂದಿಗೆ ದೇವಸ್ಥಾನದ ಸುತ್ತ ಪಲ್ಲಕ್ಕಿಯು 21 ಸುತ್ತು ಹಾಕುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಳ್ಳಲಿದೆ. ಗ್ರಾಮದೇವತೆಯರ ದೇವಾಲಯದ ಆವರಣದಲ್ಲಿ ಅಮ್ಮಿನಭಾವಿ ಪಂಚಗೃಹ ಹಿರೇಮಠದ (ಶ್ರೀಶಾಂತೇಶ್ವರ ಮಠದ) ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಪಾದಪೂಜೆ ನೆರವೇರಿದನಂತರ ಉಭಯ ಶ್ರೀಗಳು ಈ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ದಾಸೋಹ ಸೇವೆಯ ಅನ್ನಸಂತರ್ಣೆಗೆ ಚಾಲನೆ ನೀಡುವರು.
ಜೂ.4 ರ ಸಂಜೆ ಗ್ರಾಮದ ಯುವಕ ಸಂಘಟನೆಗಳ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವಾರ್ಷಿಕೋತ್ಸವ ಜರುಗುವ ಹುಣ್ಣಿಮೆಯ ದಿನ (ಭಾನುವಾರ) ಮತ್ತು ಕರೀ ದಿನ ವಾರಬಿಡುವ ಪದ್ಧತಿ ಆಚರಣೆಗೆ ನಿರ್ಧರಿಸಲಾಗಿದ್ದು, ಈ ಎರಡೂ ದಿನಗಳಂದು ಯಾವುದೇ ಮನೆಯಲ್ಲಿ ರೊಟ್ಟಿ ಮಾಡುವಂತಿಲ್ಲ, ಈ ಎರಡೂ ದಿನಗಳಂದು ಅಮ್ಮಿನಭಾವಿ, ಮರೇವಾಡ, ತಿಮ್ಮಾಪೂರ, ಕವಲಗೇರಿ ಹಾಗೂ ಚಂದನಮಟ್ಟಿ ಗ್ರಾಮಗಳ ಸಕಲ ಸದ್ಭಕ್ತರು ಗ್ರಾಮದೇವತೆಯರಿಗೆ ಉಡಿತುಂಬಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅಮ್ಮಿನಭಾವಿಯ ಶ್ರೀಗ್ರಾಮದೇವತಾ ಜಾತ್ರಾಮಹೋತ್ಸವ ಸಮಿತಿ ತಿಳಿಸಿದೆ.