ಇಎನ್ಎಲ್ ಕಲಘಟಗಿ: ನಿಗದಿತ ಸಮಯಕ್ಕೆ 108 ಆ್ಯಂಬುಲೆನ್ಸ್ ಬಾರದ ಕಾರಣಕ್ಕೆ ಕೆರೆಯಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸೂಕ್ತ ವೇಳೆಗೆ ಆಸ್ಪತ್ರೆಗೆ ದಾಖಲಾಗದ ಕಾರಣ ಮೃತಪಟ್ಟಿದ್ದಾನೆ ಎಂದು ದೂರಿ ಸ್ಥಳೀಯರು ಕಲಘಟಗಿ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಮುಖ್ಯ ಆರೋಗ್ಯಾಧಿಕಾರಿ ಅಮಾನತ್ತಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿ ಬರುವ ರುಸ್ತುಸಾಬ ಕೆರೆಯಲ್ಲಿ ಶಂಕ್ರಯ್ಯ ಗುರುಶಾಂತಯ್ಯ ಹಿರೇಮಠ (60) ಕೈಕಾಲು ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಅಸ್ವಸ್ಥವಾಗಿದ್ದರು.
ಕೂಡಲೆ ಸ್ಥಳೀಯರು ವ್ಯಕ್ತಿಯನ್ನು ಹೊರತೆಗೆದು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ ಆದರೆ 45 ನಿಮಿಷಗಳ ಕಾಲ ಕಳೆದರು ಆ್ಯಂಬುಲೆನ್ಸ್ ಬರದೆ ಇದ್ದಾಗ ಕೂಡಲೆ ಸ್ಥಳೀಯರು ಬೇರೆ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಸ್ವಲ್ಪ ಸಮಯದ ನಂತರ ಗುರುಶಾಂತಯ್ಯ ಮೃತಪಟ್ಟಿದ್ದಾರೆ.
ಸಮಯಕ್ಕೆ ಸರಿಯಾಗಿ 108 ಆ್ಯಂಬ್ಯುಲೆನ್ಸ್ ಬರದೆ ಇರುವ ಕಾರಣ ಗುರುಶಾಂತಯ್ಯ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಆಸ್ಪತ್ರೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ. ಕೂಡಲೆ ಇಲ್ಲಿಯ ಮುಖ್ಯ ಆರೋಗ್ಯಾಧಿಕಾರಿ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿ ಆಸ್ಪತ್ರೆ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಪ್ರಭು ಸೂರಿನ ಆಗಮಿಸಿದ್ದಾರೆ.