ಇಎನ್ಎಲ್ ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೈತರ ಟ್ರೇಲರ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: ಕೆಲವು ದಿನಗಳ ಹಿಂದೆ ಹರ್ಲಾಪುರ ಗ್ರಾಮದ ರೈತರೊಬ್ಬರು ತಮ್ಮ ಟ್ರೇಲರ್ ಕಳವಾಗಿದೆ ಎಂದು ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಠಾಣೆಯ ಪಿಎಸ್ಐ ಸವಿತಾ ಮುನ್ಯಾಳ ಮತ್ತು ಸಿಬ್ಬಂದಿ ವರ್ಗದವರು ಖಚಿತ ಮಾಹಿತಿ ಮೇರೆಗೆ ಆರೋಪಿಯಾದ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರ ಬಡ್ನಿ ಗ್ರಾಮದ ಕರಿಯಪ್ಪ ಫಕೀರಪ್ಪ ಹಂಚಿನಮನಿ (ದೊಡಮನಿ)( 35) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಅವನಿಂದ 3 ಟ್ರೇಲರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ 3 ಟ್ರೇಲರ್ ಗಳಲ್ಲಿ ಒಂದು ಗುಡಗೇರಿ ಗ್ರಾಮದ ರೈತರಾದ ಬಾಪುಗೌಡ ಯತ್ನಳ್ಳಿ ಅವರದ್ದು ಇನ್ನೊಂದು ಹರ್ಲಾಪುರ ಗ್ರಾಮದ ರಾಮಪ್ಪ ಮಹಾದೇವಪ್ಪ ಕೂರಡೂರ ಎಂಬ ರೈತನದ್ದು ಎಂದು ತಿಳಿದುಬಂದಿದೆ.