ಇಎನ್ಎಲ್ ಧಾರವಾಡ: ಲೋಕಾಯುಕ್ತ ಹಾಗೂ ಎಸಿಬಿ ಪೋಲೀಸ್ ಠಾಣೆ ಕ್ರೈಂ ನಂಬರ 04/2018 ಕಲಂ.7,13(1) (ಡಿ) ಸಹ ಕಲಂ 13 (2) ಲಂಚ ನಿರೋಧ ಕಾಯ್ದೆ-1988ರ ಆಪಾದಿತ ಅಧಿಕಾರಿ ರಮೇಶ ನೀಲಪ್ಪ ಡವಳಗಿ, ಭೂಮಾಪಕರು, ಉದ್ಯೋಗ: ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಅರ್ಬನ್ ಪ್ರಾಪರ್ಟಿ ಓನರಶಿಪ್ ರೆಕಾಡ್ರ್ಸ್ ವಿಭಾಗ, ಮಿನಿವಿಧಾನಸೌಧ, ಹುಬ್ಬಳ್ಳಿ ಇವರು ಫಿರ್ಯಾದಿದಾರನ ಜಮೀನಿನ ಸರ್ವೆಯನ್ನು ನ್ಯಾಯಯುತವಾಗಿ ಮಾಡಬೇಕಾದ ಕೆಲಸಕ್ಕೆ ಲಂಚದ ಹಣ ರೂ.4,000/-ಗಳನ್ನು ದಿನಾಂಕ:28-03-2018 ರಂದು ಸ್ವೀಕರಿಸುತ್ತಿರುವ ಸಮಯದಲ್ಲಿ ಲೋಕಾಯುಕ್ತ /ಎಸಿಬಿ ಪೋಲೀಸ್ ಠಾಣೆ, ಧಾರವಾಡ ಅಧಿಕಾರಿಗಳ ಬಲೆಗೆ ಬಿದ್ದು, ಅಂದಿನ ಲೋಕಾಯುಕ್ತ /ಎಸಿಬಿ ಪೋಲೀಸ್ ಇನ್ಸ್ಪೆಕ್ಟರುಗಳಾದ ಶ್ರೀ ಪ್ರಮೋದ ಸಿ. ಯಲಿಗಾರ ಮತ್ತು ಶ್ರೀ ಮಂಜುನಾಥ ಜಿ. ಹೀರೆಮಠ, ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಸದರಿ ಪ್ರಕರಣದ ವಿಚಾರಣೆಯನ್ನು ಮಾನ್ಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡ ನ್ಯಾಯಾಧೀಶರಾದ ಶ್ರೀ ಎನ್. ಸುಬ್ರಮಣ್ಯ ರವರು ದಿನಾಂಕ:25-04-2023 ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಸದರಿ ಆರೋಪಿತನ ವಿರುದ್ಧ ಅಪರಾಧ ಸಾಬೀತಾಗಿ, ಆರೋಪಿತನಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.10,000/-ಗಳ ದಂಡ ವಿಧಿಸಿರುತ್ತಾರೆ. ಹಾಗೂ ಸದರಿ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಶ್ರೀ ಎಸ್.ಎಸ್. ಶಿವಳ್ಳಿಯವರು ಪ್ರಕರಣ ಕುರಿತು ವಾದ ಮಂಡಿಸಿರುತ್ತಾರೆ.