ಇಎನ್ಎಲ್ ಧಾರವಾಡ: ಅಕ್ರಮ ಸಂಬಂಧ ಪ್ರಶ್ನೆ ಮಾಡಿ ಜಗಳ ಮಾಡಿದ ಪತಿಯನ್ನು ಪ್ರಿಯಕರನ ಜೊತೆಗೂಡಿ ಕೊಡಲಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣ ಧಾರವಾಡದ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ (33) ಭೀಕರವಾಗಿ ಕೊಲೆ ಆಗಿದ್ದಾನೆ.
ಈತನ ಪತ್ನಿ ಪ್ರಕರಣದ ಎರಡನೇ ಆರೋಪಿಯಾಗಿದ್ದು, ಮೊದಲ ಆರೋಪಿ ಶಿವಾನಂದ ನಾಗಪ್ಪ ನಿಂಬೋಜಿ ಎಂಬಾತ ಭೀಮಪ್ಪನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಭೀಮಪ್ಪನ ಪತ್ನಿಗೂ, ಶಿವಾನಂದನಿಗೂ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದನ್ನು ಕಂಡ ಭೀಮಪ್ಪ ಅಕ್ಷರಶಃ ಕೆಂಡಾಮಂಡಲ ಆಗಿದ್ದ. ಪತ್ನಿಯ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದ.
ನೋಡುವಷ್ಟು ನೋಡಿದ ಮಹಿಳಾಮಣಿ ಗಂಡನ ಕೊಲೆಗೆ ಮುಹೂರ್ತ ಇಟ್ಟಿದ್ದಾಳೆ. ಶಿವಾನಂದನ ಕೈಗೆ ಕೊಡಲಿ ಕೊಟ್ಟು ಕಡಿಸಿದ್ದಾಳೆ. ಮಗನ ಕಳೇಬರವನ್ನು ಕಂಡ ಭೀಮಪ್ಪನ ಅಪ್ಪ ಸಿದ್ದಪ್ಪ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾನೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 302, ಸಹ ಕಲಂ 34 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
‘ಕೊಲೆ ಆರೋಪಿಗಳನ್ನು ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಆರೋಪಿತರು ಕೃತ್ಯಕ್ಕೆ ಉಪಯೋಗಿಸದ ವಸ್ತುಗಳನ್ನು ಜಪ್ತ ಮಾಡಿದ್ದು ಇರುತ್ತದೆ’ ಎಂದು ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.