24 C
Hubli
ಮಾರ್ಚ್ 21, 2023
eNews Land
ಸಿನೆಮಾ ಸುದ್ದಿ

ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಮಣ್ಣಿನ ಮೂರ್ತಿ ಮಾಡಿದ್ದಾರೆ

Listen to this article

ಕಾರವಾರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನವಾಗಿ ವಾರ ಕಳೆಯುತ್ತಿದ್ದರೂ ಇನ್ನೂ ಕೂಡ ಅವರ ಅಭಿಮಾನಿಗಳಿಗೆ ಈ ಕಹಿ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಅವರ ಮಣ್ಣಿನ ಮೂರ್ತಿಯೊಂದನ್ನು ತಯಾರಿಸುವ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

 

ಮಣ್ಣಿನಲ್ಲಿ ಅರಳಿದ ‘ನಟಸಾರ್ವಭೌಮ’

ತಾಲೂಕಿನ ಮಾಜಾಳಿಯ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಭಿನಂದನ್ ಬಾಂದೇಕರ್ ಅವರು ಪುನೀತ್ ಅವರ ಎರಡು ಅಡಿ ಎತ್ತರದ ಮಣ್ಣಿನ ಮೂರ್ತಿ ತಯಾರಿಸುವ ಮೂಲಕ ನೆಚ್ಚಿನ ನಟನನ್ನು ನೆನೆದಿದ್ದಾರೆ.

ಅಭಿನಂದನ್ ಅವರದ್ದು ಕಲಾವಿದರ ಕುಟುಂಬ. ಕಳೆದ ಹತ್ತು- ಹದಿನೈದು ವರ್ಷಗಳಿಂದ ಅಭಿನಂದನ್ ಅವರ ತಂದೆ ಕಾಜುಬಾಗದ ಸಾರ್ವಜನಿಕ ಗಣಪತಿಯನ್ನು ಮಾಡಿಕೊಡುತ್ತಿದ್ದು, ಅಭಿನಂದನ್ ಕೂಡ ತಂದೆಗೆ ಸಹಾಯ ಮಾಡುತ್ತಾರೆ. ವರ್ಷದ ಹಿಂದೆ ಮೃತಪಟ್ಟಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಮಣ್ಣಿನ ಮೂರ್ತಿಯನ್ನೂ ಅಭಿನಂದನ್ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇದೀಗ ಅಪ್ಪು ಅವರ ಮಣ್ಣಿನ ಮೂರ್ತಿಯನ್ನು ಮೂರು ದಿನಗಳಲ್ಲಿ ನಿರ್ಮಿಸಿ, ಪುನೀತ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೂರ್ತಿ ನಿರ್ಮಾಣದ ವಿಡಿಯೋ ಹಂಚಿಕೊಂಡಿರುವ ಅವರಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಜೊತೆಗೆ ಈಗಾಗಲೇ ಚಿತ್ರದುರ್ಗ ಹಾಗೂ ಬೆಂಗಳೂರಿನಿಂದ ತಮಗೂ ಮೂರ್ತಿ ಸಿದ್ಧಪಡಿಸಿಕೊಡುವಂತೆ ಆರ್ಡರ್ ಕೂಡ ಬಂದಿದೆಯಂತೆ.

ಈ ಬಗ್ಗೆ ಮಾತನಾಡಿದ ಅಭಿನಂದನ್, ನಮ್ಮದು ಕೊಂಕಣಿ ಭಾಷಿಗರ ಕುಟುಂಬವಾದರೂ ನಾವು ಕನ್ನಡದ ಅಭಿಮಾನಿಗಳು. ಪುನೀತ್ ರಾಜಕುಮಾರರ ಬಗ್ಗೆ ಅವರು ಬದುಕಿದ್ದಾಗ ಕೇಳಿದ್ದಕ್ಕಿಂತ ಹೆಚ್ಚು ಅವರ ನಿಧನ‌ದ ನಂತರ ತಿಳಿಯಲ್ಪಟ್ಟೆವು. ಅವರ ಸಾಮಾಜಿಕ ಕಾರ್ಯಗಳಿಗೆ ಇಡೀ ಭಾರತವೇ ತಲೆಬಾಗಿದೆ. ಹೀಗಾಗಿ ಅಂಥ ಅಗಲಿದ ಮಹಾಚೇತನಕ್ಕೆ ನನ್ನ ಕೈಲಾದಷ್ಟು ಸೇವೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದೇನೆ ಎಂದರು.

Related posts

ಡಿ. 17,18ರಂದು ಅಮೃತೇಶ್ವರ ಜಾತ್ರೆ‌

eNewsLand Team

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ಶೇ.9ರಷ್ಟು ಜಿಎಸ್‌ಟಿ ವಿನಾಯಿತಿ

eNEWS LAND Team

NDA’s Presidential nominee Draupadi Murmu set to win with a huge majority: CM Bommai

eNEWS LAND Team